70 ಸಾವಿರಕ್ಕಿಂತ ಹೆಚ್ಚು ಹುದ್ದೆಗಳ ನೇಮಕಾತಿಗೆ ಸರ್ಕಾರದ ಅನುಮೋದನೆ!!
ರಾಜ್ಯದ ನಿರುದ್ಯೋಗಿ ಯುವಕ – ಯುವತಿಯರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. ರಾಜ್ಯದ ವವಿಧ 34 ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 72186 ಹುದ್ದೆಗಳ ನೇಮಕಾತಿಗೆ ಸರ್ಕಾರದ ಅನುಮೋದನೆ ದೊರೆತಿದೆ. ಇದು ಸಾವಿರಾರು ನಿರುದ್ಯೋಗಿ ಯುವಕರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
ಇದರಿಂದ ದೀರ್ಘಕಾಲದಿಂದ ನೇಮಕಾತಿಗಾಗಿ ಕಾಯುತ್ತಿದ್ದ ಉದ್ಯೋಗಾಕಾಂಕ್ಷಿಗಳಿಗೆ ಸಂತಸದ ಸುದ್ದಿ ದೊರೆತಿದೆ.
ನೇಮಕಾತಿ ಪ್ರಕ್ರಿಯೆಯನ್ನು ಸಂಬಂಧಿತ ನೇಮಕಾತಿ ಸಂಸ್ಥೆಗಳ ಮೂಲಕ ಹಂತ ಹಂತವಾಗಿ ನಡೆಸಲಾಗುತ್ತದೆ. ಇಲಾಖಾವಾರು ಹುದ್ದೆಗಳ ಸಂಖ್ಯೆ, ವಿದ್ಯಾರ್ಹತೆ, ವಯೋಮಿತಿ, ಮೀಸಲಾತಿ, ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಆಯ್ಕೆ ಪ್ರಕ್ರಿಯೆ ಕುರಿತ ಸಂಪೂರ್ಣ ಮಾಹಿತಿಯನ್ನು ಶೀಘ್ರದಲ್ಲೇ ಅಧಿಕೃತ ಅಧಿಸೂಚನೆಯ ಮೂಲಕ ಪ್ರಕಟಿಸಲಾಗುತ್ತದೆ.
ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಪ್ರಕ್ರಿಯೆ ಆರಂಭಿಸಿದೆ.. ಪ್ರಸ್ತಾವನೆಯ ವಿವರಗಳ ಪ್ರಕಾರ 2023-24 ನೇ ಸಾಲಿನಿಂದ ಇಂದಿನವರೆಗೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 40009 ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆ ಸಹಮತಿ ನೀಡಿದೆ. ಇದರೊಂದಿಗೆ ಕಲ್ಯಾಣ-ಕರ್ನಾಟಕ ಪ್ರದೇಶದ ಸ್ಥಳೀಯ ವೃಂದದಲ್ಲಿ ಖಾಲಿ ಇರುವ 32177 ಹುದ್ದೆಗಳ ಪೈಕಿ ಶೇಕಡಾ 80 ರಷ್ಟು ಹುದ್ದೆಗಳನ್ನು ಭರ್ತಿ ಮಾಡಲು ಸಹ ಆರ್ಥಿಕ ಇಲಾಖೆಯು ಪರಿಭಾವಿತ ಸಹಮತಿ ನೀಡಿದೆ.
ತ್ವರಿತ ನೇಮಕಾತಿ
ಈ ಬೃಹತ್ ನೇಮಕಾತಿ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕ ಹಾಗೂ ತ್ವರಿತವಾಗಿ ನೆಡೆಸಲು ಸರ್ಕಾರವು ಕಾಲಮಿತಿಯನ್ನು ನಿಗದಿಪಡಿಸಿದೆ. ಮುಂದಿನ 2 ತಿಂಗಳುಗಳ ಒಳಗಾಗಿ ನೇಮಕಾತಿ ಅಧಿಸೂಚನೆಗಳನ್ನು ಹೊರಡಿಸಲು ಯೋಜನೆಯನ್ನು ರೂಪಿಸುತ್ತಿದೆ.
ಕೆಪಿಎಸ್ಸಿ ಸಿದ್ದತೆ ಏನು?
ಕರ್ನಾಟಕ ಲೋಕಸೇವಾ ಆಯೋಗವು ಜುಲೈ ಆರಂಭದಲ್ಲಿ ಹೊಸ ಅಧಿಸೂಚನೆಗಳನ್ನು ಹೊರಡಿಸಲು ಸಿದ್ದತೆ ನೆಡೆಸಿದೆ. ತನ್ನಲ್ಲಿ ಬಾಕಿ ಆಗಿರುವ ನೇಮಕ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಮುಗಿಸುವುದಕ್ಕೆ ಆದ್ಯತೆ ನೀಡಿದ್ದ ಆಯೋಗ ಇದೀಗ ಹೊಸ ಅಧಿಸೂಚನೆ ಹೊರಡಿಸುವ ಸಂಬಂಧವೂ ಪ್ರಕ್ರಿಯೆ ಆರಂಭಿಸಿದೆ. 12 ಇಲಾಖೆಗಳು ತಮ್ಮ ಕೋರಿಕೆಯನ್ನು ಆಯೋಗಕ್ಕೆ ಸಲ್ಲಸಿವೆ. ಕೆಲವು ಒಳ ಮೀಸಲು ಹಂಚಿಕೆ ರೋಸ್ಟರ್ ಪ್ರಕ್ರಿಯೆಯಲ್ಲಿ ಇವೆ. ಜೂನ್ ಅಂತ್ಯಕ್ಕೆ ಯಾವುದೆಲ್ಲ ಅಂತಿಮಗೊಳ್ಳುತ್ತದೆಯೋ ಅದೆಲ್ಲವನ್ನೂ ಸೇರಿಸಿ ಜುಲೈ ಮೊದಲಿಗೆ ಅಧಿಸೂಚನೆ ಹೊರಡಿಸಲು ನಿರ್ಧರಿಸಲಾಗಿದೆ. ಎಂದು ಕೆಪಿಎಸ್ಸಿ ತಿಳಿಸಿದೆ.
ಅಭ್ಯರ್ಥಿಗಳು ಅಧಿಕೃತ ಪ್ರಕಟಣೆ ಹೊರಬಂದ ನಂತರ ಮಾತ್ರ ಅರ್ಜಿ ಸಲ್ಲಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಅಪೂರ್ಣ ಅಥವಾ ಸುಳ್ಳು ಮಾಹಿತಿಯನ್ನು ನಂಬದೇ, ಸಂಬಂಧಿತ ಇಲಾಖೆ ಅಥವಾ ನೇಮಕಾತಿ ಸಂಸ್ಥೆಯ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟವಾಗುವ ಅಧಿಸೂಚನೆಯನ್ನು ಪರಿಶೀಲಿಸುವುದು ಸೂಕ್ತ.
ಈ ಅನುಮೋದನೆಯೊಂದಿಗೆ ವಿವಿಧ ಸರ್ಕಾರಿ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಗೆ ವೇಗ ಸಿಗುವ ನಿರೀಕ್ಷೆಯಿದ್ದು, ರಾಜ್ಯದ ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಇದು ಉತ್ತಮ ಅವಕಾಶವಾಗಲಿದೆ.